೨೦೨೧ ರ ಕರ್ನಾಟಕ ಸರ್ಕಾರದ ಅಧಿಕಾರಿಯ ಮೇಲೆ ಭ್ರಷ್ಟಾಚಾರ ವಿರೋಧಿ ದಾಳಿಯ ವೀಡಿಯೋವನ್ನು ದೆಹಲಿಯದೆಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ

ಮೂಲಕ: ರಜಿನಿ ಕೆ.ಜಿ
ಆಗಸ್ಟ್ 14 2023

ಲೇಖನ ಹಂಚಿಕೊಳ್ಳಿ: facebook logo twitter logo linkedin logo
೨೦೨೧ ರ ಕರ್ನಾಟಕ ಸರ್ಕಾರದ ಅಧಿಕಾರಿಯ ಮೇಲೆ ಭ್ರಷ್ಟಾಚಾರ ವಿರೋಧಿ ದಾಳಿಯ ವೀಡಿಯೋವನ್ನು ದೆಹಲಿಯದೆಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ವೈರಲ್ ವೀಡಿಯೋವು ೨೦೨೧ ರಲ್ಲಿ ಕರ್ನಾಟಕ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಅವರ ಮನೆಯಲ್ಲಿ ನಡೆದ ಭ್ರಷ್ಟಾಚಾರ-ವಿರೋಧಿ ದಾಳಿ, ದೆಹಲಿಯಲ್ಲಿ ಅಲ್ಲ.

ಕ್ಲೈಮ್ ಐಡಿ d30d90ac

ಸಂದರ್ಭ

ವ್ಯಕ್ತಿಯೊಬ್ಬ ಡ್ರೈನೇಜ್ ಪೈಪ್ ಕತ್ತರಿಸಿ ಅದರಿಂದ ನಗದನ್ನು ಹೊರತೆಗೆಯುತ್ತಿರುವ ವೀಡಿಯೋವನ್ನು ಎಕ್ಸ್ (X) (ಹಿಂದೆ ಟ್ವಿಟರ್ ಎಂದು ಕರೆಯಲಾಗುತಿತ್ತು), ಫೇಸ್‌ಬುಕ್ ಮತ್ತು ಯೂಟ್ಯೂಬ್‌ನಲ್ಲಿ, “ದೆಹಲಿಯಲ್ಲಿ ಸೆಂಟ್ರಲ್ ಪಿಡಬ್ಲ್ಯೂಡಿ ಇಂಜಿನಿಯರ್ ಮನೆಗೆ ದಾಳಿ, ೧೯ ನೀರಿನ ಪೈಪ್‌ಗಳನ್ನು ಕತ್ತರಿಸಿ ೧೩ ಕೋಟಿ ವಸೂಲಿ ಮಾಡಲಾಗಿದೆ" ಎಂದು ಹಂಚಿಕೊಳ್ಳಲಾಗುತ್ತಿದೆ. ವ್ಯಕ್ತಿಯೊಬ್ಬ ಪೈಪ್ ಮೇಲೆ ಹತ್ತಿ ರಾಡ್ ಬಳಸಿ ಬಕೆಟ್ ನಲ್ಲಿ ಹಣ ಸಂಗ್ರಹಿಸುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ಪೋಷ್ಟ್ ಬರೆಯುವ ಸಮಯದಲ್ಲಿ ೮೨,೦೦೦ ವೀಕ್ಷಣೆಗಳನ್ನು ಗಳಿಸಿದೆ.

ಇದು ದೆಹಲಿಯಿಂದ ಬಂದಿದೆ ಎಂಬ ಹೇಳಿಕೆಯೊಂದಿಗೆ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ. (ಮೂಲ: X/@aapka_vineet)

ಆದರೆ, ವೀಡಿಯೋ ಹಳೆಯದಾಗಿದ್ದು, ಕರ್ನಾಟಕದಲ್ಲಿ ನಡೆದಿರುವ ಘಟನೆಗೆ ಸಂಬಂಧಿಸಿದ್ದು.

ವಾಸ್ತವವಾಗಿ

ವೈರಲ್ ವೀಡಿಯೋದಲ್ಲಿರುವ ಜನರು ಕನ್ನಡದಲ್ಲಿ ಮಾತನಾಡುತ್ತಿದ್ದಾರೆ ಎಂದು ಲಾಜಿಕಲಿ ಫ್ಯಾಕ್ಟ್ಸ್ ಕಂಡುಕೊಂಡಿದೆ. ಈ ಸೂಚನೆಯನ್ನು ತೆಗೆದುಕೊಂಡು, ನಾವು ಕರ್ನಾಟಕದಲ್ಲಿ ಪೈಪ್‌ನ ಒಳಗಿನಿಂದ ಹಣ ವಶಪಡಿಸಿಕೊಳ್ಳಲಾಗಿದೆ ಎಂಬ ವರದಿಗಳನ್ನು ನೋಡಿದೆವು. ವೈರಲ್ ವೀಡಿಯೋ ರಾಜ್ಯದ ಕಲಬುರ್ಗಿ ಜಿಲ್ಲೆಯಲ್ಲಿ ೨೦೨೧ ರಲ್ಲಿ ಚಿತ್ರೀಕರಿಸಿದ್ದು ಎಂದು ನಾವು ಕಂಡುಕೊಂಡಿದ್ದೇವೆ.

ಹಿಂದೂಸ್ತಾನ್ ಟೈಮ್ಸ್ ವರದಿಯು ಇದೇ ರೀತಿಯ ವೀಡಿಯೋವನ್ನು ನವೆಂಬರ್ ೨೫, ೨೦೨೧ ರಂದು ಪ್ರಕಟಿಸಿತು, ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ಕರ್ನಾಟಕದಲ್ಲಿ ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯೂಡಿ) ಜೂನಿಯರ್ ಎಂಜಿನಿಯರ್ (ಜೆಇ) ಅವರ ಮನೆಯ ಮೇಲೆ ದಾಳಿ ನಡೆಸಿ ಒಳಚರಂಡಿ ಪೈಪ್‌ ಒಂದರಿಂದ ೧೩ ಲಕ್ಷ ರೂ ಮೌಲ್ಯದ ಹಣವನ್ನು ವಶಪಡಿಸಿಕೊಂಡಿದ್ದಾರೆ ಎಂದು ವರದಿ ಮಾಡಿದೆ. ವೈರಲ್ ವೀಡಿಯೊದಲ್ಲಿರುವ ಜನರನ್ನು ನಾವು ಹಿಂದೂಸ್ತಾನ್ ಟೈಮ್ಸ್ ಪ್ರಕಟಿಸಿದ ವೀಡಿಯೋದಲ್ಲಿ ನೋಡಬಹುದು.

ವೈರಲ್ ವೀಡಿಯೋ ಮತ್ತು ಹಿಂದೂಸ್ತಾನ್ ಟೈಮ್ಸ್‌ನ ಯೂಟ್ಯೂಬ್ ಚಾನಲ್ ನಲ್ಲಿ ಪೋಷ್ಟ್ ಮಾಡಿದ ವೀಡಿಯೋ ನಡುವಿನ ಹೋಲಿಕೆ. (ಮೂಲ: ಲಾಜಿಕಲಿ ಫ್ಯಾಕ್ಟ್ಸ್ ಇಂದ ಬದಲಾಯಿಸಲಾಗಿದೆ)

 

ಇಂಡಿಯಾ ಟುಡೇ ಪತ್ರಕರ್ತ ಶಿವ ಆರೂರ್ ಅವರು ನವೆಂಬರ್ ೨೪, ೨೦೨೧ ರಂದು ತಮ್ಮ X ಅಧಿಕೃತ ಖಾತೆಯಲ್ಲಿ ವಿಭಿನ್ನ ಕೋನದಿಂದ ಚಿತ್ರೀಕರಿಸಲಾದ ಇದೇ ವೈರಲ್ ವೀಡಿಯೋವನ್ನು ಪೋಷ್ಟ್ ಮಾಡಿದ್ದಾರೆ.

ಶಿವ ಆರೂರ್ ಅವರ ಟ್ವೀಟ್‌ನ ಸ್ಕ್ರೀನ್‌ಶಾಟ್. (ಮೂಲ: X/@ShivAroor)

ದಿ ಇಂಡಿಯನ್ ಎಕ್ಸ್‌ಪ್ರೆಸ್ ಪ್ರಕಾರ, ಪಿಡಬ್ಲ್ಯೂಡಿ ಇಂಜಿನಿಯರ್ ಜೆಇ ಶಾಂತಗೌಡ  ಅವರ ಮೇಲೆ ದಾಳಿ ನಡೆಸಲಾಯಿತು ಮತ್ತು ಅವರ ಕಲಬುರಗಿ ನಿವಾಸವನ್ನು ನವೆಂಬರ್ ೨೪, ೨೦೨೧ ರಂದು ಅವರು ತಮ್ಮ ಅವಧಿಯಲ್ಲಿ ಅಸಮಾನ ಸಂಪತ್ತನ್ನು ಗಳಿಸಿದ್ದಾರೆ ಎಂಬ ಶಂಕೆಯ ಮೇಲೆ ಎಸಿಬಿ ಶೋಧಿಸಿದ್ದರು.

ನ್ಯೂಸ್ ಫಸ್ಟ್ ಕನ್ನಡಕ್ಕೆ ನೀಡಿದ ಎಸಿಬಿಯ ಅಧಿಕೃತ ಹೇಳಿಕೆಯ ಪ್ರಕಾರ, ವೈರಲ್ ವೀಡಿಯೊದಲ್ಲಿ ಕಂಡುಬರುವ ಪೈಪ್‌ನಿಂದ ₹ ೧೩ ಲಕ್ಷಕ್ಕೂ ಹೆಚ್ಚು ನಗದು ವಶಪಡಿಸಿಕೊಳ್ಳಲಾಗಿದೆ. ಅವರ ಮನೆಯಿಂದ ಒಟ್ಟು ₹ ೫೪ ಲಕ್ಷವನ್ನು ವಶಪಡಿಸಿಕೊಳ್ಳಲಾಗಿದೆ, ವೈರಲ್ ಪೋಷ್ಟ್‌ನಲ್ಲಿ ಹೇಳಿಕೊಂಡಂತೆ ₹ ೧೩ ಕೋಟಿ ಅಲ್ಲ.

ನ್ಯೂಸ್ ೧೮ ಕನ್ನಡ, ಪಬ್ಲಿಕ್ ಟಿವಿ ಮತ್ತು ಟಿವಿ ೯ ಕನ್ನಡ, ೨೦೨೧ ರಲ್ಲಿ ಜೆಇ ಶಾಂತಗೌಡ ಬಿರಾದಾರ್ ಅವರ ಮನೆ ಮೇಲೆ ಎಸಿಬಿ ದಾಳಿಯ ಬಗ್ಗೆ ವರದಿ ಮಾಡಿವೆ. ಹೊಸ ದಿಲ್ಲಿಯಲ್ಲಿ ಪಿಡಬ್ಲ್ಯೂಡಿ ಇಂಜಿನಿಯರ್ ಮೇಲೆ ನಡೆಸಿದ ದಾಳಿಗಳ ಬಗ್ಗೆ ನಮಗೆ ಯಾವುದೇ ಇತ್ತೀಚಿನ ವರದಿಗಳು ಕಂಡುಬಂದಿಲ್ಲ.

ತೀರ್ಪು

ಕರ್ನಾಟಕದ ಹಳೆಯ ವೀಡಿಯೋವನ್ನು ದೆಹಲಿಯಲ್ಲಿ ನೆಡೆದ ರೈಡ್ ಎಂದು ತಪ್ಪಾಗಿ ಶೇರ್ ಮಾಡಲಾಗಿದೆ. ಆದ್ದರಿಂದ, ನಾವು ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸಿದ್ದೇವೆ.

ಈ ವಾಸ್ತವಾಂಶವನ್ನು ಪರಿಶೀಲಿಸಿ

English , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.