ಇಲ್ಲ, ಈ ವೈರಲ್ ವೀಡಿಯೋ ಕಾಶ್ಮೀರದ ಅಹರ್ಬಲ್ ಜಲಪಾತದಲ್ಲಿ ಮುಳುಗಿದ ಯುವಕನನ್ನ ತೋರಿಸುತ್ತಿಲ್ಲ

ಮೂಲಕ: ಅಂಕಿತಾ ಕುಲಕರ್ಣಿ
ಆಗಸ್ಟ್ 1 2023

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಇಲ್ಲ, ಈ ವೈರಲ್ ವೀಡಿಯೋ ಕಾಶ್ಮೀರದ ಅಹರ್ಬಲ್ ಜಲಪಾತದಲ್ಲಿ ಮುಳುಗಿದ ಯುವಕನನ್ನ ತೋರಿಸುತ್ತಿಲ್ಲ

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ಕರ್ನಾಟಕದ ಉಡುಪಿ ಜಿಲ್ಲೆಯಲ್ಲಿ ತುಂಬಿ ಹರಿಯುತ್ತಿರುವ ಅರಸಿನಗುಂಡಿ ಜಲಪಾತಕ್ಕೆ ವ್ಯಕ್ತಿಯೊಬ್ಬನು ಬೀಳುತ್ತಿರುವ ದೃಶ್ಯವನ್ನು ಈ ವೀಡಿಯೋ ತೋರಿಸುತ್ತದೆ.

ಕ್ಲೈಮ್ ಐಡಿ 70cd0545

ಸಂದರ್ಭ
ಕಳೆದ ಕೆಲವು ವಾರಳಗಿಂದ ಭಾರೀ ಮಳೆಯಿಂದ ಭಾರತದ ವಿವಿಧ ಭಾಗಗಳಲ್ಲಿ ಪ್ರವಾಹದಂತಹ ಪರಿಸ್ಥಿತಿ ಸೃಷ್ಟಿಯಾಗಿದೆ ಮತ್ತು ಹಲವಾರು ಜಲಪಾತಗಳು ಉಕ್ಕಿ ಹರಿಯುತ್ತಿವೆ. ಈ ಮಧ್ಯೆ, ವ್ಯಕ್ತಿಯೊಬ್ಬನು ಜಲಪಾತಕ್ಕೆ ಜಾರಿ ಬೀಳುವ ದೃಶ್ಯವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅದು ಕಾಶ್ಮೀರದ ಅಹರ್ಬಲ್ ಜಲಪಾತದಲ್ಲಿ ಸೆರೆಹಿಡಿಯಲಾಗಿದೆ ಮತ್ತು ವೀಡಿಯೋದಲ್ಲಿರುವ ವ್ಯಕ್ತಿ ಶೋಪಿಯಾನ್ ಪಟ್ಟಣದ ನಿವಾಸಿ ಎಂದು ಹೇಳಲಾಗುತ್ತಿದೆ. ಫೇಸ್‌ಬುಕ್‌ ನಲ್ಲಿ ಶೇರ್ ಮಾಡಲಾದ ಈ ವೀಡಿಯೋ ಮೇಲೆ ಹೀಗೆ ಬರೆಯಲಾಗಿದೆ, "ಅಹರ್ಬಲ್ ಜಲಪಾತ ತಾರಿಕ್ ಫ್ರಮ್ ಶೋಪಿಯಾನ್ ನಾನೆಹಾಲ್." ಕೊನೆಯಲ್ಲಿ, ವೀಡಿಯೋ ಸೂಚಿಸುತ್ತಿರುವ ಸಂತ್ರಸ್ತೆಯ ಚಿತ್ರವನ್ನು ಸಹ ಹೊಂದಿದೆ. ಈ ಪೋಷ್ಟ್ ೮೭೬,೦೦೦ ಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು ೧೭,೨೦೦ ಕ್ಕೂ ಹೆಚ್ಚು ಲೈಕ್ ಗಳನ್ನೂ ಗಳಿಸಿದೆ.

ಆದರೆ, ವೀಡಿಯೋ ಕಾಶ್ಮೀರದ ಅಹರ್ಬಲ್ ಜಲಪಾತದಲ್ಲ. 

ವಾಸ್ತವವಾಗಿ
ವೈರಲ್ ವೀಡಿಯೋದಲ್ಲಿ ಕಂಡುಬಂದ ಈ ಘಟನೆಯು ಕರ್ನಾಟಕದ ಅರಸಿನಗುಂಡಿ ಜಲಪಾತದಲ್ಲಿ ಸೆರೆಹಿಡಿಯಲಾಗಿದೆ ಎಂದು ವಿವಿಧ ಭಾರತೀಯ ಸುದ್ದಿವಾಹಿನಿಗಳು ವರದಿ ಮಾಡಿವೆ. ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ಜುಲೈ ೨೩ರಂದು ಈ ಘಟನೆ ನಡೆದಿದ್ದು, ಕರ್ನಾಟಕದ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮೂಲಕ ಹರಿಯುವ ಸೌಪರ್ಣಿಕಾ ನದಿಯಿಂದ ಉಂಟಾದ ಪ್ರವಾಹದಲ್ಲಿ ೨೩ ವರ್ಷದ ಯುವಕನು ಕೊಚ್ಚಿ ಹೋದನು ಎಂದು ಹೇಳಲಾಗಿದೆ. ವೀಡಿಯೋದ ಸ್ಕ್ರೀನ್‌ಗ್ರಾಬ್ ಅನ್ನು ತೋರುವ ವರದಿಯು, ಆ ವ್ಯಕ್ತಿಯು ಅರಸಿನಗುಂಡಿ ಜಲಪಾತವನ್ನು ನೋಡುವಾಗ ಬಂಡೆಯಿಂದ ಜಾರಿ ಬಿದ್ದಾಗ ಸಂಭವಿಸಿದ ಘಟನೆ ಇದು ಎಂದು ಹೇಳುತ್ತದೆ. ಆ ವ್ಯಕ್ತಿಯು ನಾಪತ್ತೆಯಾಗಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. 

ಏಷ್ಯಾನೆಟ್ ಸುವರ್ಣ ನ್ಯೂಸ್ ಮತ್ತು ಪಬ್ಲಿಕ್ ಟಿವಿಯಂತಹ ಸ್ಥಳೀಯ ಕನ್ನಡ ಮಾಧ್ಯಮಗಳ ವರದಿಗಳ ಪ್ರಕಾರ, ನೀರಿನಲ್ಲಿ ಕೊಚ್ಚಿ ಹೋದ ವ್ಯಕ್ತಿ ಶರತ್ ಕುಮಾರ್ ಎಂದು ಗುರುತಿಸಲಾಗಿದ್ದು, ಇವರು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಮೂಲದವರಾಗಿದ್ದರು. ಅವರು ವೀಡಿಯೋಗೆ ಪೋಸ್ ನೀಡುತ್ತಿದ್ದ ಸಂದರ್ಭದಲ್ಲಿ ಸಮತೋಲನವನ್ನು ಕಳೆದುಕೊಂಡು ನದಿಯ ಪ್ರವಾಹಕ್ಕೆ ಬಿದ್ದಿದ್ದಾರೆ ಎಂದು ಸೂಚಿಸಲಾಗಿದೆ. ಈ ಘಟನೆಯನ್ನು ಆತನ ಸ್ನೇಹಿತ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾನೆ.

ಭಾರೀ ಮಳೆಯಿಂದ ಉಡುಪಿ ಜಿಲ್ಲೆ ಸೇರಿದಂತೆ ಕರಾವಳಿ ಕರ್ನಾಟಕದಲ್ಲಿ ಭಾರತೀಯ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ತಿಳಿಸಿದೆ.

ಇತ್ತೀಚೆಗೆ ಕಾಶ್ಮೀರದಲ್ಲಿ ಇದೇ ರೀತಿಯ ದುರಂತ ಸಂಭವಿಸಿದೆಯೇ ಎಂದು ಲಾಜಿಕಲಿ ಫ್ಯಾಕ್ಟ್ಸ್ ಪರಿಶೀಲಿಸಿದಾಗ ಜುಲೈ ೨೪ ರಂದು ತಾರಿಕ್ ಅಹ್ಮದ್ ಶೇಖ್ ಎಂದು ಗುರುತಿಸಲಾದ ೨೨ ವರ್ಷದ ವ್ಯಕ್ತಿ ಕುಲ್ಗಾಮ್ ಜಿಲ್ಲೆಯ ಅಹರ್ಬಲ್ ಜಲಪಾತಕ್ಕೆ ಬಿದ್ದು ಮುಳುಗಿ ಸಾವನ್ನಪ್ಪಿದ್ದಾನೆ ಎಂದು ಸ್ಥಳೀಯ ಸುದ್ದಿ ವರದಿಗಳು ಹೇಳುತ್ತವೆ.

ಜುಲೈ ೨೪ ರಂದು ಪ್ರಕಟವಾದ ಸ್ಥಳೀಯ ಸುದ್ದಿ ವಾಹಿನಿ ದಿ ಕಾಶ್ಮೀರಿಯತ್ ವರದಿಯು ಶೇಖ್ ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಮಣಿ ಹಾಲ್ ಗ್ರಾಮದ ನಿವಾಸಿ ಎಂದು ಹೇಳಿದೆ. ಫೇಸ್‌ಬುಕ್‌ನಲ್ಲಿ ವಾಹಿನಿಯು ಅಪ್‌ಲೋಡ್ ಮಾಡಿದ ವೀಡಿಯೋ ವರದಿಯ ಪ್ರಕಾರ, ಜುಲೈ ೨೫ ರಂದು ಜಲಪಾತದ ಬಳಿ ರಕ್ಷಣಾ ತಂಡವು ಶೇಖ್ ಅವರ ದೇಹವನ್ನು ಪತ್ತೆ ಮಾಡಲಾಗಿತ್ತು.

ಅಹರ್ಬಲ್ ಜಲಪಾತದ ಸ್ಥಳಾಕೃತಿ, ಇಂಡಿಯಾ ಟುಡೇ ವರದಿಯಲ್ಲಿ ಕಂಡುಬರುವ ದೃಶ್ಯಗಳು ಮತ್ತು ವೈರಲ್ ವೀಡಿಯೋದಲ್ಲಿ ಕಂಡುಬರುವ ಜಲಪಾತವು ತುಂಬಾ ವಿಭಿನ್ನವಾಗಿದೆ ಎಂದು ನಾವು ಗಮನಿಸಬಹುದು. ವೈರಲ್ ವೀಡಿಯೋದಲ್ಲಿ ಜಲಪಾತದ ಸುತ್ತಾ ಮರಗಳು ಮತ್ತು ದೊಡ್ಡ ಕಲ್ಲುಗಳು ನಾವು ನೋಡಬಹುದು, ಆದರೆ ಅಹರ್ಬಲ್ ಜಲಪಾತವು ಕಲ್ಲಿನ ಭೂಪ್ರದೇಶದ ಮೂಲಕ ಹರಿಯುತ್ತದೆ.

ಅಹರ್ಬಲ್ ಜಲಪಾತಕ್ಕೆ ಕಾಶ್ಮೀರಿ ವ್ಯಕ್ತಿಯೊಬ್ಬ ಬೀಳುತ್ತಿರುವ ದೃಶ್ಯವೆಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ವೀಡಿಯೋ ಕರ್ನಾಟಕದ ಅರಸಿನಗುಂಡಿ ಜಲಪಾತದಲ್ಲಿ ನಡೆದ ಪ್ರತ್ಯೇಕ ಘಟನೆಯಾಗಿದೆ ಎಂದು ಇದು ದೃಢಪಡಿಸುತ್ತದೆ.

ವೈರಲ್ ವೀಡಿಯೋದ ಕೊನೆಯಲ್ಲಿ ಫೇಸ್‌ಬುಕ್ ಪೋಷ್ಟ್ ನಲ್ಲಿ ಹಂಚಿಕೊಳ್ಳಲಾದ ಚಿತ್ರವು ತಾರಿಕ್ ಅಹ್ಮದ್ ಶೇಖ್ ಅವರದ್ದು ಎಂದು ಖಚಿತವಾಗಿ ಪರಿಶೀಲಿಸಲು ಲಾಜಿಕಲಿ ಫ್ಯಾಕ್ಟ್ಸ್ ಗೆ ಸಾಧ್ಯವಾಗಲಿಲ್ಲ.

ತೀರ್ಪು
ಜುಲೈ ೨೪ ರಂದು ಕಾಶ್ಮೀರದ ಅಹರ್ಬಲ್ ಜಲಪಾತಕ್ಕೆ ಬಿದ್ದು ವ್ಯಕ್ತಿಯೊಬ್ಬರು ಸಾವನ್ನಪಿರುವುದು ನಿಜ, ಆದರೆ ಸಾಮಾಜಿಕ ಮಾಧ್ಯಮದಲ್ಲಿ ಈ ಮಾಹಿತಿಯೊಂದಿಗೆ ವೈರಲ್ ಆಗಿರುವ ವೀಡಿಯೋ ವಾಸ್ತವವಾಗಿ, ಕರ್ನಾಟಕದ ಅರಸಿನಗುಂಡಿ ಜಲಪಾತಕ್ಕೆ ವ್ಯಕ್ತಿಯೊಬ್ಬರು ಬಿದ್ದ ಘಟನೆಯನ್ನು ತೋರಿಸುತ್ತದೆ. ವೈರಲ್ ಆದ ವೀಡಿಯೋಗು ಅಹರ್ಬಲ್ ಘಟನೆಗೂ ಯಾವುದೇ ಸಂಬಂಧವಿಲ್ಲ. ಆದ್ದರಿಂದ, ನಾವು ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸುತ್ತಿದ್ದೇವೆ. 

ಈ ವಾಸ್ತವಾಂಶವನ್ನು ಪರಿಶೀಲಿಸಿ

English , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.