ಮಣಿಪುರದಲ್ಲಿ ಬಿಜೆಪಿ ಧ್ವಜದ ಮೇಲೆ ನಡೆದ ಗೋ ಹತ್ಯೆಯ ಹಳೆಯ ವೀಡಿಯೋವನ್ನು ಕರ್ನಾಟಕ ಚುನಾವಣೆಗೆ ತಪ್ಪಾಗಿ ಹೋಲಿಸಲಾಗಿದೆ

ಮೂಲಕ: ರಜಿನಿ ಕೆ.ಜಿ
ಜೂನ್ 28 2023

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಮಣಿಪುರದಲ್ಲಿ ಬಿಜೆಪಿ ಧ್ವಜದ ಮೇಲೆ ನಡೆದ ಗೋ ಹತ್ಯೆಯ ಹಳೆಯ ವೀಡಿಯೋವನ್ನು ಕರ್ನಾಟಕ ಚುನಾವಣೆಗೆ ತಪ್ಪಾಗಿ ಹೋಲಿಸಲಾಗಿದೆ

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ಈ ಘಟನೆಯು ಜನವರಿ ೨೦೨೨ರದ್ದು ಮತ್ತು ಮಣಿಪುರ ವಿಧಾನಸಭಾ ಚುನಾವಣೆಗೆ ಬಿಜೆಪಿಯ ಟಿಕೆಟ್ ಘೋಷಣೆಯನ್ನು ವಿರೋಧಿಸಿ ನೆಡೆಸಲಾಗಿತ್ತು.

ಕ್ಲೈಮ್ ಐಡಿ fe9aa8b9

ಸಂದರ್ಭ

ಕರ್ನಾಟಕ ರಾಜ್ಯದಲ್ಲಿ ಮೇ ೧೦, ೨೦೨೩ ರಂದು ಚುನಾವಣೆ ನಡೆಯಿತು ಮತ್ತು ಕಾಂಗ್ರೆಸ್ ೨೩೪ ಸ್ಥಾನಗಳಲ್ಲಿ ೧೩೫ ಸ್ಥಾನಗಳನ್ನು ಗೆದ್ದಿದೆ. ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಭರ್ಜರಿ ಗೆಲುವಿನ ನಂತರ ಭಾರತೀಯ ಜನತಾ ಪಕ್ಷದ (ಬಿಜೆಪಿ) ಧ್ವಜದ ಮೇಲೆ ಗೋ ಹತ್ಯೆ ಮಾಡುತ್ತಿರುವ ಚಿತ್ರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಸಾಮಾಜಿಕ ಮಾಧ್ಯಮ ಬಳಕೆದಾರರು ವೀಡಿಯೋವಿನ ಸ್ಕ್ರೀನ್‌ಗ್ರಾಬ್‌ಗಳನ್ನು ಹಂಚಿಕೊಂಡು ಈ ಘಟನೆಯು ಕರ್ನಾಟಕದದ್ದು ಮತ್ತು ಮುಸ್ಲಿಮರು ಚುನಾವಣೆಯಲ್ಲಿ ಕಾಂಗ್ರೆಸ್ ವಿಜಯವನ್ನು ಆಚರಿಸುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಆದರೆ, ಅವರು ತಮ್ಮ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದಾರೆ ಮತ್ತು ತಿದ್ದುಪಡಿಯನ್ನು ಪೋಷ್ಟ್ ಮಾಡಿದ್ದಾರೆ. ಮತ್ತೊಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರರು ಈ ವೀಡಿಯೋವನ್ನು ಪೋಷ್ಟ್ ಮಾಡಿದ್ದಾರೆ, ಮತ್ತು ಹೀಗೆ ಬರೆದಿದ್ದಾರೆ: "ಕರ್ನಾಟಕದಲ್ಲಿ ಖಾನ್-ಗ್ರೇಸ್ ವಿಜಯವನ್ನು ಬಿಜೆಪಿ ಧ್ವಜದ ಮೇಲೆ ಗೋ ಹತ್ಯೆ ಮಾಡುವ ಮೂಲಕ ಆಚರಿಸಲಾಗುತ್ತದೆ. ನಿಜವಾದ ಭಾರತೀಯರು!! ದ್ವೇಷಕ್ಕೆ ಹಸು ಬೆಲೆ ತೆರುತ್ತದೆ!!!" ಆದರೆ, ವೀಡಿಯೋ ಹಳೆಯದಾಗಿದ್ದು, ಕರ್ನಾಟಕಕ್ಕೆ ಸಂಬಂಧವಿಲ್ಲ.

ವಾಸ್ತವವಾಗಿ

ರಿವರ್ಸ್ ಇಮೇಜ್ ಸರ್ಚ್ ನ ಮೂಲಕ, ವೀಡಿಯೋವು ೨೦೨೨ರದ್ದು ಎಂದು ನಾವು ಕಂಡುಕೊಂಡಿದ್ದೇವೆ. ಜನವರಿ ೩೧, ೨೦೨೩ ರಂದು, 'Nishant Azad/निशांत आज़ाद' ಖಾತೆಯ ಹೆಸರಿನ ಟ್ವಿಟರ್ ಬಳಕೆದಾರರು ಅದೇ ಘಟನೆಯ ವೀಡಿಯೋವನ್ನು ಟ್ವೀಟ್ ಮಾಡಿದ್ದಾರೆ. "#ಬಿಜೆಪಿ ಧ್ವಜ ಇಟ್ಟುಕೊಂಡು ಮುಸ್ಲಿಮರು #ಗೋ ಹತ್ಯೆ ಮಾಡಿದರು. ಗೂಂಡಾಗಳು ಮುಖ್ಯಮಂತ್ರಿ @NBirenSingh ಮತ್ತು @BJP4Manipur ಅಧ್ಯಕ್ಷೆ ಎ ಸರ್ದಾ ದೇವಿ ಅವರನ್ನು ನಿಂದಿಸಿದ್ದಾರೆ" ಎಂಬ ಶೀರ್ಷಿಕೆ ನೀಡಲಾಗಿದೆ. ಅದೇ ಟ್ವೀಟ್‌ಗೆ ಪ್ರತ್ಯುತ್ತರವಾಗಿ, ಮಣಿಪುರದ ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್, ಫೆಬ್ರವರಿ ೧, ೨೦೨೨ ರಂದು, ಇಂಫಾಲ್ ಫ್ರೀ ಪ್ರೆಸ್ ಎಂಬ ಸುದ್ದಿ ವೆಬ್‌ಸೈಟ್‌ನ ಶೀರ್ಷಿಕೆಯ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿದ್ದಾರೆ. ಅದರ ಶೀರ್ಷಿಕೆ ಹೀಗಿದೆ "ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಮೇಲೆ ಗೋ ಹತ್ಯೆ ಆರೋಪದಡಿ ಮೂವರನ್ನು ಬಂಧಿಸಲಾಗಿದೆ." ವೈರಲ್ ಚಿತ್ರವು ವೀಡಿಯೋದಲ್ಲಿನ ಫ್ರೇಮ್‌ಗಳಿಗೆ ಹೊಂದಿಕೆಯಾಗಿದ್ದು, ಈ ವೀಡಿಯೋ ಕರ್ನಾಟಕದದ್ದಲ್ಲ ಎಂದು ಸೂಚಿಸುತ್ತದೆ.

ಜನವರಿ ೩೧, ೨೦೨೨ ರ ಮಣಿಪುರದ ಸ್ಥಳೀಯ ಪತ್ರಿಕೆ ಇಂಫಾಲ್ ಫ್ರೀ ಪ್ರೆಸ್‌ನ ಅದೇ ಸುದ್ದಿ ವರದಿಯನ್ನು ನಾವು ಪತ್ತೆ ಮಾಡಿದೆವು ಮತ್ತು ಮೂವರು ವ್ಯಕ್ತಿಗಳು ಹಸುವನ್ನು ಕಡಿಯುತ್ತಿರುವುದನ್ನು ತೋರಿಸುವ ವೀಡಿಯೋ ವೈರಲ್ ಆಗಿರುವುದನ್ನು ನಾವು ಕಂಡುಕೊಂಡೆವು. ವರದಿಯ ಪ್ರಕಾರ, "ಮಣಿಪುರ ವಿಧಾನಸಭಾ ಚುನಾವಣೆಗೆ ಬಿಜೆಪಿ ಟಿಕೆಟ್ ಘೋಷಣೆಯ ವಿರುದ್ಧದ ಪ್ರತಿಭಟನೆಯ ಸಂಕೇತವಾಗಿ" ನೆಲದ ಮೇಲೆ ಹಾಕಲಾದ ಬಿಜೆಪಿ ಧ್ವಜದ ಮೇಲೆ ಹಸುವನ್ನು ಹತ್ಯೆ ಮಾಡುವುದನ್ನು ವೀಡಿಯೋ ತೋರಿಸಿದೆ. ಮೂವರನ್ನು ಪೊಲೀಸರು ಬಂಧಿಸಿದರು ಮತ್ತು ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ ೧೯೬೦ ರ ಅಡಿಯಲ್ಲಿ ಮತ್ತು ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಸೃಷ್ಟಿಸಿದ ಆರೋಪದಡಿ ಪ್ರಕರಣ ದಾಖಲಿಸಿದ್ದಾರೆ. 'ನಿಶಾಂತ್ ಆಜಾದ್' ಅವರ ಟ್ವೀಟ್‌ನಲ್ಲಿ ನೋಡಿದಂತೆ, ವೀಡಿಯೋದಲ್ಲಿರುವ ಪುರುಷರು ಮಣಿಪುರ ಸಿಎಂ ಎನ್. ಬಿರೇನ್ ಸಿಂಗ್ ಅವರನ್ನು ನಿಂದಿಸುತ್ತಿದ್ದಾರೆ ಎಂದು ವರದಿ ವಿವರಿಸಿದೆ.

ಫೆಬ್ರವರಿ ೨, ೨೦೨೨ ರ ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ಈ ಘಟನೆಯು ಮಣಿಪುರ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಮತ್ತು ಬಿಜೆಪಿಯು ೬೦ ಸ್ಥಾನಗಳಿಗೆ ಟಿಕೆಟ್ ಘೋಷಿಸಿದ ನಂತರ ಸಂಭವಿಸಿದೆ. ಬಿಜೆಪಿ ಧ್ವಜದ ಮೇಲೆ ಹಸು ಮಲಗಿರುವ ಅದೇ ವೀಡಿಯೋವನ್ನು ವರದಿ ವಿವರಿಸಿದೆ ಮತ್ತು ಅದು ಜನವರಿ ೨೦೨೨ ರ ಕೊನೆಯಲ್ಲಿ ವೈರಲ್ ಆಗಿತ್ತು. ಪೊಲೀಸರು ಸ್ವಯಂಪ್ರೇರಿತ ಪ್ರಕರಣವನ್ನು ದಾಖಲಿಸಿದ ನಂತರ ಮಣಿಪುರದ ತೌಬಲ್ ಜಿಲ್ಲೆಯ ಮೈತೆ ಪಂಗಲ್ ಪ್ರದೇಶದಲ್ಲಿ ಆರೋಪಿಗಳನ್ನು ಬಂಧಿಸಲಾಯಿತು ಎಂದು ವರದಿ ತಿಳಿಸಿದೆ.

ಜನವರಿ ೩೧, ೨೦೨೨ ರ ಇಂಫಾಲ್ ಫ್ರೀ ಪ್ರೆಸ್‌ನ ಮತ್ತೊಂದು ವರದಿಯು ಅದೇ ವೀಡಿಯೋದ ಕುರಿತು ಮಾತನಾಡಿದೆ ಮತ್ತು ಚುನಾವಣೆಯಲ್ಲಿ ಸ್ಪರ್ಧಿಸುವ ಪಕ್ಷದ ಅಭ್ಯರ್ಥಿಗಳ ಸಂಪೂರ್ಣ ಪಟ್ಟಿಯನ್ನು ಬಿಜೆಪಿ ಘೋಷಿಸಿದೆ ಎಂದು ತಿಳಿಸಿದೆ. ಈ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಪ್ರತಿಭಟನೆಗಳನ್ನು ನಡೆಸಲಾಯಿತು ಮತ್ತು ಬಿಜೆಪಿಯ ತಿರಸ್ಕೃತ ಅಭ್ಯರ್ಥಿಗಳು ಪ್ರತಿಭಟನೆಯ ಸಂಕೇತವಾಗಿ ಬೀದಿಗಳಲ್ಲಿ ಬಿಜೆಪಿ ಧ್ವಜಗಳು ಮತ್ತು ಬ್ಯಾನರ್‌ಗಳನ್ನು ಸುಡುತ್ತಿರುವುದು ಗಮನಕ್ಕೆ ಬಂದಿತು.

ತೀರ್ಪು

೨೦೨೨ ರ ಮಣಿಪುರ ವಿಧಾನಸಭಾ ಚುನಾವಣೆಗೆ ಮುನ್ನ ನಡೆದ ಘಟನೆಯ ವೀಡಿಯೋವನ್ನು, ಇದು ೨೦೨೩ ರ ಕರ್ನಾಟಕ ಚುನಾವಣೆಯಲ್ಲಿ ಕಾಂಗ್ರೆಸ್ ಜಯಗಳಿಸಿದ ನಂತರ ಸಂಭವಿಸಿದೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ. ವೀಡಿಯೋ ಕರ್ನಾಟಕ ಮತದಾನಕ್ಕೆ ಮುಂಚಿನದ್ದಾಗಿದೆ ಮತ್ತು ಘಟನೆಯು ಜನವರಿ ೨೦೨೨ ರಲ್ಲಿ ನಡೆದಿದೆ ಎಂದು ಹಲವಾರು ವರದಿಗಳು ದೃಢೀಕರಿಸುವುದರಿಂದ, ನಾವು ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸಿದ್ದೇವೆ.

ಈ ವಾಸ್ತವಾಂಶವನ್ನು ಪರಿಶೀಲಿಸಿ

English , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.