ಯಡಿಯೂರಪ್ಪನವರನ್ನು ಉಲ್ಲೇಖಿಸಿ ಮಾತನಾಡಿರುವ ಕರ್ನಾಟಕ ಸಿಎಂ ಸಿದ್ದರಾಮಯ್ಯನವರ ಕ್ಲಿಪ್ಅನ್ನು ತಪ್ಪಾಗಿ ಹಂಚಿಕೊಳ್ಳಲಾಗಿದೆ

ಮೂಲಕ: ಪ್ರವೀಣ್ ಕುಮಾರ್ ಹೆಚ್
ಜನವರಿ 2 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಯಡಿಯೂರಪ್ಪನವರನ್ನು ಉಲ್ಲೇಖಿಸಿ ಮಾತನಾಡಿರುವ ಕರ್ನಾಟಕ ಸಿಎಂ ಸಿದ್ದರಾಮಯ್ಯನವರ ಕ್ಲಿಪ್ಅನ್ನು ತಪ್ಪಾಗಿ ಹಂಚಿಕೊಳ್ಳಲಾಗಿದೆ

ಬಿಜೆಪಿ ಆಡಳಿತದಲ್ಲಿ ಕೃಷಿ ಸಾಲ ಮನ್ನಾ ಕುರಿತು ಯಡಿಯೂರಪ್ಪನವರು ಪ್ರತಿಕ್ರಿಯಿಸಿದ ಬಗ್ಗೆ ಸಿದ್ದರಾಮಯ್ಯ ಮಾತನಾಡುವ ಎಡಿಟ್ ಮಾಡಿದ ವೀಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದ್ದು, ಪ್ರಸ್ತುತ ದಿನಗಳಲ್ಲಿ ಇವು ಸಿದ್ದರಾಮಯ್ಯ ಅವರ ಸ್ವಂತ ಮಾತು ಎಂದು ಹೇಳಿಕೊಳ್ಳಲಾಗಿದೆ. (ಮೂಲ: ಎಕ್ಸ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ಸಂದರ್ಭದಿಂದ ಹೊರಗಿಡಲಾಗಿದೆ

ವೀಡಿಯೋದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಉಲ್ಲೇಖಿಸಿ ಮಾತನಾಡಿದ್ದಾರೆ, ಕಾಂಗ್ರೆಸ್ ಪಕ್ಷದ ಭರವಸೆ ಬಗ್ಗೆ ಅಲ್ಲ.

ಕ್ಲೈಮ್ ಐಡಿ d2be4d03

ಇಲ್ಲಿನ ಹೇಳಿಕೆಯೇನು?

೧೩ ಸೆಕೆಂಡುಗಳ ವೀಡಿಯೋ ಕ್ಲಿಪ್ ಒಂದು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಕನ್ನಡದಲ್ಲಿ ಹೀಗೆ ಹೇಳುವುದನ್ನು ತೋರಿಸುತ್ತದೆ, “ಎಲ್ಲಿಂದ ತರಲಿ ದುಡ್ಡು? ಚುನಾವಣೆ ಸಂದರ್ಭದಲ್ಲಿ ನಾವು ಏನಾದರೂ ಭರವಸೆ ನೀಡಿರಬಹುದು. ಹೇಳಿದಂತೆ ನಡೆದುಕೊಳ್ಳಲು ಆಗುತ್ತಾ?” ಈ ಕ್ಲಿಪ್ ಆನ್‌ಲೈನ್‌ನಲ್ಲಿ ವ್ಯಾಪಕವಾಗಿ ಪ್ರಸಾರವಾಗಿದೆ. ಕರ್ನಾಟಕದ ಸಿಎಂ ಚುನಾವಣಾ ಭರವಸೆಗಳನ್ನು ಈಡೇರಿಸಲು ಹಣವಿಲ್ಲ ಎಂದು ಒಪ್ಪಿಕೊಂಡಿದ್ದಾರೆ ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಈ ವೀಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ. ವಿವಿಧ ಪ್ಲಾಟ್‌ಫಾರ್ಮ್‌ಗಳಲ್ಲಿ ಕಂಡುಬಂದ ಅಂತಹ ಪೋಷ್ಟ್ ಗಳ ಆರ್ಕೈವ್ ಮಾಡಿದ ಆವೃತ್ತಿಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.

ತೆಲಂಗಾಣದ ಮಾಜಿ ಮಾಹಿತಿ ತಂತ್ರಜ್ಞಾನ ಸಚಿವ ಕೆ.ಟಿ. ರಾಮರಾವ್ (ಕೆಟಿಆರ್) ಅವರು ಡಿಸೆಂಬರ್ ೧೯ ರಂದು ಎಕ್ಸ್‌ನಲ್ಲಿ ಇದೇ ವೀಡಿಯೋವನ್ನು ಹಂಚಿಕೊಂಡು ಇದು ತೆಲಂಗಾಣದ ಭವಿಷ್ಯದ ಟೆಂಪ್ಲೇಟ್ ಆಗಬಹುದೇ ಎಂದು ಪ್ರಶ್ನಿಸಿದ್ದಾರೆ. ಕರ್ನಾಟಕದ ಸಿಎಂ ಮತದಾರರನ್ನು ವಂಚಿಸಿದ್ದಾರೆ ಮತ್ತು ಸಂಶೋಧನೆಯ ಕೊರತೆಯನ್ನು ಪ್ರಶ್ನಿಸಿದ್ದಾರೆ ಮತ್ತು ಅಂತಹ ಹೇಳಿಕೆಗಳನ್ನು ನೀಡುವ ಮೊದಲು ಸರಿಯಾಗಿ ಯೋಚಿಸಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ (ಇಲ್ಲಿ ಆರ್ಕೈವ್ ಮಾಡಲಾಗಿದೆ).

ತೆಲುಗು ಸುದ್ದಿ ವೆಬ್‌ಸೈಟ್ ಆರ್ ಟಿವಿ ನ್ಯೂಸ್ ನೆಟ್‌ವರ್ಕ್ ಕೂಡ ಅದೇ ಹೇಳಿಕೆಯನ್ನು ಹೊಂದಿರುವ ಲೇಖನವನ್ನು ಪ್ರಕಟಿಸಿದೆ (ಇಲ್ಲಿ ಆರ್ಕೈವ್ ಮಾಡಲಾಗಿದೆ).

ಕರ್ನಾಟಕದ ಸಿಎಂ ಅವರ ಹೇಳಿಕೆಯೆಂದು ಈ ಹೇಳಿಕೆಯನ್ನು ತೆಲುಗು ಪ್ರೇಕ್ಷಕರಲ್ಲೂ ವ್ಯಾಪಕವಾಗಿ ಹಂಚಿಕೊಳ್ಳಲ್ಪಟ್ಟಿದೆ. (ಮೂಲ: ಎಕ್ಸ್/ಸ್ಕ್ರೀನ್‌ಶಾಟ್‌ಗಳು)

ಆದರೆ, ಈ ವೀಡಿಯೋದಲ್ಲಿ ಸಿದ್ದರಾಮಯ್ಯನವರು ಮಾಜಿ ಸಿಎಂ ಯಡಿಯೂರಪ್ಪ ಅವರ ಮಾತನ್ನು ಉಲ್ಲೇಖಿಸಿ ಮಾತನಾಡುತ್ತಿದ್ದಾರೆ ಎಂದು ಕಂಡುಬಂದಿದೆ.

ನಾವು ಕಂಡುಹಿಡಿದಿದ್ದು?

ವೈರಲ್ ಕ್ಲಿಪ್ ಅನ್ನು ಹಂಚಿಕೊಳ್ಳುವ ಮೊದಲು ಈ ತುಣುಕನ್ನು ಮೂಲ ವೀಡಿಯೋದಿಂದ ಎಡಿಟ್ ಮಾಡಿ ತೆಗೆದುಕೊಳ್ಳಲಾಗಿದೆ  ಎಂದು ನಮ್ಮ ತನಿಖೆಯಿಂದ ತಿಳಿದುಬಂದಿದೆ. ಡಿಸೆಂಬರ್ ೧೬, ೨೦೨೩ ರಂದು ಯೋಯೋ ನ್ಯೂಸ್ ಕನ್ನಡ ಎಂಬ ಯೂಟ್ಯೂಬ್ ಚಾನೆಲ್ ಗೆ ಅಪ್‌ಲೋಡ್ ಮಾಡಿದ ಎಂಟು ನಿಮಿಷಗಳ ವೀಡಿಯೋದಲ್ಲಿ ಇದರ ಪೂರ್ಣ ಆವೃತ್ತಿಯನ್ನು ನಾವು ಕಂಡುಕೊಂಡಿದ್ದೇವೆ. ಎಡಿಟ್ ಮಾಡದ ವೀಡಿಯೋದಲ್ಲಿ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ಭಾಗಶಃ ಕಾಣಿಸಿಕೊಂಡಿದ್ದಾರೆ. ವೀಡಿಯೋ ಶೀರ್ಷಿಕೆಯು ಹೀಗೆ ಹೇಳುತ್ತದೆ “ಬಿಎಸ್ ಯಡಿಯೂರಪ್ಪ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ | ಕರ್ನಾಟಕ ವಿಧಾನಸಭೆ | ಬೆಳಗಾವಿ ಚಳಿಗಾಲದ ಅಧಿವೇಶನ (ಕನ್ನಡಕ್ಕೆ ಅನುವಾದಿಸಲಾಗಿದೆ).”

ಇದರ ಸೂಚನೆಯನ್ನು ತೆಗೆದುಕೊಂಡು, ಡಿಸೆಂಬರ್ ೧೫ ರಂದು ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿ ನಡೆದ ೨೦೨೩ ರ ಕರ್ನಾಟಕ ವಿಧಾನಸಭೆಯ ಚಳಿಗಾಲದ ಅಧಿವೇಶನದ ಅಧಿಕೃತ ವೀಡಿಯೋವನ್ನು ನಾವು ಕಂಡುಕೊಂಡಿದ್ದೇವೆ. ಈ ೫.೫ ಗಂಟೆಗಳ ಅವಧಿಯ ವೀಡಿಯೋವು ಸರ್ಕಾರದ ವೀಡಿಯೋ ಪೋರ್ಟಲ್ ವೆಬ್‌ಕಾಸ್ಟ್‌ನಲ್ಲಿ ಲಭ್ಯವಿದೆ. ವೈರಲ್ ಕ್ಲಿಪ್ ಇದರ ೪:೨೯:೩೮ ಟೈಮ್‌ಸ್ಟ್ಯಾಂಪ್‌ನಲ್ಲಿ ಕಾಣಿಸಿಕೊಳ್ಳುತ್ತದೆ.

ವೆಬ್‌ಕಾಸ್ಟ್ ನಲ್ಲಿನ ಮೂಲ ವೀಡಿಯೋ ಮತ್ತು ವೈರಲ್ ವೀಡಿಯೋ ಮಧ್ಯೆ ಹೋಲಿಕೆ. (ಮೂಲ: ಎಕ್ಸ್/ವೆಬ್‌ಕಾಸ್ಟ್/ಸ್ಕ್ರೀನ್‌ಶಾಟ್‌ಗಳು/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಸಿದ್ದರಾಮಯ್ಯ ಅವರ ಹೇಳಿಕೆಯ ಹಿಂದಿನ ಸಂದರ್ಭವೇನು?

ಚಳಿಗಾಲದ ಅಧಿವೇಶನದಲ್ಲಿ ಸಿದ್ದರಾಮಯ್ಯ ಅವರು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (ಬಿಜೆಪಿ),  ಸರ್ಕಾರ ಸಾಲ ಮನ್ನಾ ಮಾಡದಿದ್ದರೆ ಪ್ರತಿಭಟನಾ ಸಭೆಗಳನ್ನು ಆಯೋಜಿಸುವುದಾಗಿ ಬೆದರಿಕೆ ಹಾಕಿದ್ದರು ಎಂಬುದನ್ನು ಉಲ್ಲೇಖಿಸಿ ಮಾತನಾಡಿದರು. ಡಿಸೆಂಬರ್ ೧೩, ೨೦೨೩ ರಂದು ಬೆಳಗಾವಿಯಲ್ಲಿ ನಡೆದ ರೈತರ ರ‍್ಯಾಲಿಯಲ್ಲಿ ಹೇಳಿರುವುದಾಗಿ, ದಿ ಹಿಂದೂ ಮತ್ತು ಡೆಕ್ಕನ್ ಹೆರಾಲ್ಡ್ ಈ ಹೇಳಿಕೆಯನ್ನು ವರದಿ ಮಾಡಿವೆ. ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ, ಸಾಲಗಳ ಬಗ್ಗೆ ಇಂತಹ ಹೇಳಿಕೆಗಳು ಸಾಮಾನ್ಯವಾಗಿ ಕೃಷಿ ಸಾಲಗಳನ್ನು ಉಲ್ಲೇಖಿಸುತ್ತವೆ.

೨೦೧೮ ರಲ್ಲಿ ಯಡಿಯೂರಪ್ಪನವರ ಅವಧಿಯಲ್ಲಿ ಬಿಜೆಪಿ ಸರ್ಕಾರವು ತನ್ನ ಪ್ರಣಾಳಿಕೆಯ ಭರವಸೆಗಳ ಹೊರತಾಗಿಯೂ ಸಾಲ ಮನ್ನಾ ಮಾಡಲು ವಿಫಲವಾಗಿದೆ ಎಂದು ಸಿದ್ದರಾಮಯ್ಯ ಅವರು ಮೂಲ ವೀಡಿಯೋದಲ್ಲಿ ಉಲ್ಲೇಖಿಸಿದ್ದಾರೆ. ಯಡಿಯೂರಪ್ಪ ಮತ್ತು ಕರ್ನಾಟಕದ ಬಳ್ಳಾರಿಯ ಮಾಜಿ ಸಂಸದ ವಿಎಸ್ ಉಗ್ರಪ್ಪ ಅವರನ್ನು ಒಳಗೊಂಡ ಡಿಸೆಂಬರ್ ೨೦೦೯ ರ ಘಟನೆಯನ್ನು ಅವರು ನೆನಪಿಸಿಕೊಳ್ಳುತ್ತಾರೆ. ಸಾಲ ಮನ್ನಾ ಕುರಿತು ಉಗ್ರಪ್ಪ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪನವರು, "ನೋಟು ಪ್ರಿಂಟ್ ಮಾಡುವ ಯಂತ್ರ ಅಳವಡಿಸಿದ್ದೇವಾ? ನಗದೆಲ್ಲ ಎಲ್ಲಿಂದ ತರುತ್ತದೆ? ಹೌದು, ಚುನಾವಣಾ ಆಶ್ವಾಸನೆಗಳನ್ನು ನೀಡಿದ್ದೇವೆ ಎಂದರೆ ಆ ಭರವಸೆಗಳನ್ನು ಈಡೇರಿಸಲು ಸಾಧ್ಯವೇ?" ಎಂದು  ಸಿದ್ದರಾಮಯ್ಯನವರು ಹೇಳಿದರು.

೨೦೦೯ ರಲ್ಲಿ ಚುನಾವಣಾ ಭರವಸೆಗಳನ್ನು ಈಡೇರಿಸಲು ಹಣವಿಲ್ಲ ಎಂದು ಯಡಿಯೂರಪ್ಪ ಸ್ಪಷ್ಟವಾಗಿ ಹೇಳಿದ್ದಾರೆಯೇ ಎಂಬುದನ್ನು ಲಾಜಿಕಲಿ ಫ್ಯಾಕ್ಟ್ಸ್ ಗೆ ಸ್ವತಂತ್ರವಾಗಿ ಪರಿಶೀಲಿಸಲು ಸಾಧ್ಯವಾಗಲಿಲ್ಲ.

ಕ್ಲಿಪ್ ವೈರಲ್ ಆದ ನಂತರ, ಸಿದ್ದರಾಮಯ್ಯ ಅವರು ಡಿಸೆಂಬರ್ ೧೮ ರಂದು ಎಕ್ಸ್ ಮತ್ತು ಫೇಸ್‌ಬುಕ್‌ನಲ್ಲಿ ಅವರು ಈ ಕ್ಲಿಪ್ ನಲ್ಲಿ ಯಡಿಯೂರಪ್ಪನವರನ್ನು ಉಲ್ಲೇಖಿಸಿ ಮಾತನಾಡಿದ್ದಾರೆ ಎಂದು ಸ್ಪಷ್ಟಪಡಿಸಿದರು.

ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನ ವರದಿಯ ಪ್ರಕಾರ, ಶಿವಮೊಗ್ಗದ ಪ್ರವಾಹ ಸಂತ್ರಸ್ತರಿಗೆ ಪರಿಹಾರಕ್ಕಾಗಿ ಒತ್ತಾಯಿಸಿದ ಯಡಿಯೂರಪ್ಪ ೨೦೧೯ ರಲ್ಲಿ ಇದೇ ರೀತಿಯ ಹೇಳಿಕೆಯನ್ನು ನೀಡಿದ್ದರು ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿ.

೨೦೨೩ ರ ಕರ್ನಾಟಕ ವಿಧಾನಸಭೆಯ ಚಳಿಗಾಲದ ಅಧಿವೇಶನದ ಸಂಪೂರ್ಣ ವೀಡಿಯೋವು ವೈರಲ್ ವೀಡಿಯೋದಲ್ಲಿನ ಹೇಳಿಕೆಯು ಸಿದ್ದರಾಮಯ್ಯನವರದ್ದಲ್ಲ, ಬದಲಿಗೆ ಅವರು ಯಡಿಯೂರಪ್ಪಅವರನ್ನು ಉಲ್ಲೇಖಿಸಿ ಹೇಳಿದ್ದು ಎಂದು ಸ್ಪಷ್ಟವಾಗಿ ತೋರಿಸುತ್ತದೆ.  ವೀಡಿಯೋದ ಕ್ರಾಪ್ ಮಾಡಿದ ಭಾಗವು ಈ ಸಂದರ್ಭವನ್ನು ಬಿಟ್ಟುಹಾಕಿದೆ.

ತೀರ್ಪು 

ಮಾಜಿ ಸಿಎಂ ಯಡಿಯೂರಪ್ಪನವರನ್ನು ಉಲ್ಲೇಖಿಸಿ ಕರ್ನಾಟಕ ಸಿಎಂ ಸಿದ್ದರಾಮಯ್ಯ ಅವರ ಎಡಿಟ್ ಮಾಡಿದ ವೀಡಿಯೋವನ್ನು ಸಂದರ್ಭದಿಂದ ತೆಗೆದುಹಾಕಲಾಗಿದೆ ಮತ್ತು ಸಿದ್ದರಾಮಯ್ಯ ಅವರದ್ದೇ ಹೇಳಿಕೆಯಿದು ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಆದ್ದರಿಂದ, ನಾವು ಈ ಎಹೇಳಿಕೆಯನ್ನು ಸಂದರ್ಭದಿಂದ ಹೊರಗಿಡಲಾಗಿದೆ ಎಂದು ಗುರುತಿಸಿದ್ದೇವೆ.

(ಅನುವಾದಿಸಿದವರು:ವಿವೇಕ್.ಜೆ)

Read this fact-check in English here.

ಈ ವಾಸ್ತವಾಂಶವನ್ನು ಪರಿಶೀಲಿಸಿ

English , ಕನ್ನಡ , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.